ಬುಧವಾರ, ಅಕ್ಟೋಬರ್ 31, 2012

ಕರ್ನಾಟಕ ಮಾತೆ – ಭುವನೇಶ್ವರಿ


 
 
“ಜಯ್ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!”. ಕುವೆಂಪು ಅವರ ಈ ಸಾಲುಗಳನ್ನು ನೆನೆಯುತ್ತಾ ಕನ್ನಡಾಂಬೆಯ ದೇಗುಲದ ಬಗ್ಗೆ ಬರೆಯುತ್ತಿದ್ದೇನೆ. ಹೌದು, ಮಾತೆ ಭುವನೇಶ್ವರಿ ಕನ್ನಡ ಮತ್ತು ಕರ್ನಾಟಕದ ಆರಾಧ್ಯ ದೈವ. ವೈವಿಧ್ಯಗಳ ತವರಾದ ಕರ್ನಾಟಕದ ನೆಲದಲ್ಲಿರುವ ಏಕೈಕ ಕನ್ನಡಾಂಬೆಯ ದೇಗುಲ ಇರುವುದು ನಿಸರ್ಗದ ಸಿರಿ ಸಂಪತ್ತಿನಿಂದ ಕೂಡಿರುವ ಬಯಲುಸೀಮೆ, ಮಲೆನಾಡು ಮತ್ತು ಕರಾವಳಿಯನ್ನು ತನ್ನೊಡಲಲ್ಲಿ ಲಾಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ.
 


ಬೆಂಗಳೂರಿನಿಂದ ಸಿದ್ದಾಪುರಕ್ಕಿರುವ ಅಂತರ ಸರಿಸುಮಾರು ೩೯೦ ಕಿ. ಮೀ. ಅಲ್ಲಿಂದ ಕುಮಟಾಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ೮ ಕಿ. ಮೀ. ಕ್ರಮಿಸಿದರೆ ಬಲ ಬದಿಯಲ್ಲಿ ಒಂದು ವಿಶಾಲವಾದ ಕೆರೆ ಕಂಡುಬರುತ್ತದೆ. ಅದರ ಸಮೀಪದಲ್ಲಿ ಬೆಟ್ಟವೇರಲು ಮೆಟ್ಟಿಲುಗಳಿವೆ. ಕೆರೆಯಿಂದ ಸುಮಾರು ೩೦೦ ಅಡಿಗಳ ಎತ್ತರದಲ್ಲಿ ಭುವನಗಿರಿಯ ಮೇಲೆ ಮಾತೆ ಭುವನೇಶ್ವರಿಯ ದೇವಾಲಯವಿದೆ. ಬೆಟ್ಟವೇರಲು ವಾಹನಗಳಿಗೆ ಕಿರಿದಾದ ರಸ್ತೆಯೂ ಇದೆ.

ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ.
ಪೌರಾಣಿಕ ಹಿನ್ನೆಲೆ: ಇಲ್ಲಿನ ದಟ್ಟ ಕಾನನದಲ್ಲಿ ಭುವನಾಸುರನೆಂಬ ಒಬ್ಬ ರಾಕ್ಷಸನಿದ್ದನಂತೆ. ಆತನ ಮಿತಿಮೀರಿದ ಉಪಟಳದಿಂದ ಜನರು ನೆಮ್ಮದಿಯಿಂದ ಬಾಳಲು ಆಗುತ್ತಿರಲಿಲ್ಲವಂತೆ. ಜನರ ಪ್ರಾರ್ಥನೆಯನ್ನು ಕೇಳಿದ ದುರ್ಗಾಮಾತೆ ಪ್ರತ್ಯಕ್ಷಳಾಗಿ ಆತನನ್ನು ವಧಿಸಲು ಅಣಿಯಾದ ಸಮಯದಲ್ಲಿ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ಕೇಳಿದನಂತೆ. ತಥಾಸ್ತು ಎಂದ ದುರ್ಗಾ ಮಾತೆಯು ಈ ಸ್ಥಳವು ಭುವನಗಿರಿಯೆಂದು ಕರೆಯಲ್ಪಡುವುದು ಮತ್ತು ನಾನು ಈ ಕ್ಷೇತ್ರದಲ್ಲಿ  ಭುವನೇಶ್ವರಿಯಾಗಿ ನೆಲೆಸಿ ನಾಡನ್ನು ಕಾಯುತ್ತೇನೆ ಎಂದಳಂತೆ.

ಐತಿಹಾಸಿಕ ಹಿನ್ನೆಲೆ: ವಿವಿಧ ಮೂಲಗಳ ಪ್ರಕಾರ ಬಿಳಗಿಯ ಅರಸರು ಕನ್ನಡ ನುಡಿಯ ಹಾಗೂ ನಾಡಿನ ಬಗ್ಗೆ ಅಪಾರ ಅಭಿಮಾನ ಉಳ್ಳವರಾಗಿದ್ದರು. ಅವರಿಗೆ ಕನ್ನಡಮಾತೆಗಾಗಿ ಒಂದು ಗುಡಿ ಕಟ್ಟಿಸುವ ಬಯಕೆ ಇತ್ತು. ಬಿಳಗಿಯ ಅರಸರಲ್ಲಿ ಕೊನೆಯವರಾದ ಬಸವೇಂದ್ರ ಈ ದೇವಾಲಯನ್ನು ೧೬೯೨ರಲ್ಲಿ ಕಟ್ಟಿಸಿದರು ಎಂದು ತಿಳಿದು ಬರುತ್ತದೆ.

ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವ‌ನ್ನು ಕಾಣಬಹುದು.
 

1 ಕಾಮೆಂಟ್‌:

  1. ಹೌದು ಇದು ನಮ್ಮ ಜಿಲ್ಲೆಯಲ್ಲಿದೆ.ನಾನು ಕಾರವಾರದಲ್ಲಿದ್ದಾಗ ಈ ಸ್ಥಳದಲ್ಲಿ ಪ್ರವಾಸಿ ಮೂಲಭೂತ ಸೌಲಭ್ಯ ಒದಗಿಸಲು ವಿಶೇಷ ಪ್ರಯತ್ನ ಮಾಡಿದ್ದೆ.ಅಲ್ಲಿನ ಅನೇಕರೊಂದಿಗೆ ವ್ಯವಹರಿಸಿದ್ದೆ.ನಂತರ ಇಲ್ಲಿಗೆ ಅನುದಾನ ಮಂಜೂರಾಯಿತು.ಈ ಹೆಮ್ಮೆ ಮಾತ್ರ ನನ್ನದು.

    ಪ್ರತ್ಯುತ್ತರಅಳಿಸಿ